ಮುಂದಿನ ಬಜೆಟ್ನಲ್ಲಿ ನೂತನವಾಗಿ 8 ಸಾವಿರ ಉಪನ್ಯಾಸಕರ ಹುದ್ದೆಗಳ ಭರ್ತಿಗೆ ಮಂಜೂರು ಮಾಡಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡುವುದಾಗಿ ಉನ್ನತ ಶಿಕ್ಷಣ ಸಚಿವರು ಹಾಗೂ ಉಪಮುಖ್ಯಮಂತ್ರಿಗಳು ಆದ ಡಾ.ಸಿ.ಎನ್ ಅಶ್ವತ್ಥನಾರಾಯಣ ರವರು ತಿಳಿಸಿದ್ದಾರೆ.
ನಿನ್ನೆ ವಿಕಾಸ ಸೌಧದಲ್ಲಿ ಮಾತನಾಡಿದ ಅವರು, 'ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕಾಗಿ ಈ ಹುದ್ದೆಗಳ ಭರ್ತಿ ಅಗತ್ಯವಾಗಿದೆ. ಅಲ್ಲದೆ 12 ಸಾವಿರ ಬೋಧಕೇತರ ಸಿಬ್ಬಂದಿ ಹುದ್ದೆಗಳನ್ನು ಮಂಜೂರು ಮಾಡಬೇಕೆಂಬ ಬೇಡಿಕೆ ಇಲಾಖೆ ಮುಂದಿದ್ದು, ತುರ್ತು ಅಗತ್ಯದ ಹುದ್ದೆಗಳನ್ನು ಮಂಜೂರು ಮಾಡಿಸಿಕೊಳ್ಳುವಲ್ಲಿ ಶಿಕ್ಷಣ ಇಲಾಖೆ ಆಧ್ಯತೆ ನೀಡಿದೆ ಎಂದು ಡಿಸಿಂಎ ಹೇಳಿದ್ದಾರೆ.
ಕೋವಿಡ್-19 ಹಿನ್ನೆಲೆ ತಡೆ ಹಿಡಿಯಲಾದ 1200 ಸಹಾಯಕ ಪ್ರಾಧ್ಯಾಪಕ, 330 ಪ್ರಿನ್ಸಿಪಾಲರ ಹುದ್ದೆಗಳ ಭರ್ತಿಗೆ ಅನುಕೂಲ ಮಾಡಿಕೊಡಬೇಕು ಎಂದು ಆರ್ಥಿಕ ಇಲಾಖೆಗೆ ಮನವಿ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಉನ್ನತ ಶಿಕ್ಷಣ ಅನುದಾನ ಹೆಚ್ಚಿಸಲು ಬೇಡಿಕೆ:
ಉನ್ನತ ಶಿಕ್ಷಣದ ನಿಗದಿತ ಅನುದಾನ ಪ್ರಮಾಣವನ್ನು ಶೇಕಡ.2 ರಿಂದ ಶೇಕಡ.3.5 ಕ್ಕೆ ಹೆಚ್ಚಿಸಬೇಕು, ಜಿಎಸ್ಡಿಪಿಯ ಮೊತ್ತ ಶೇಕಡ.0.5 ರಿಂದ 1 ಕ್ಕೆ ಹೆಚ್ಚಿಸಬೇಕೆಂಬ ಬೇಡಿಕೆಯನ್ನು ಬಜೆಟ್ ಪೂರ್ವ ಚರ್ಚೆ ಕಾಲಕ್ಕೆ ಮುಖ್ಯಮಂತ್ರಿ ರವರ ಮುಂದೆ ಮಂಡಿಸಲಾಗಿದೆ ಎಂದು ಹೇಳಿದರು.
ಪ್ರಸಕ್ತ ವರ್ಷದ ಬಜೆಟ್ನಲ್ಲಿ ಉನ್ನತ ಶಿಕ್ಷಣಕ್ಕೆ 4,700 ಕೋಟಿ ರೂ. ಒದಗಿಸಲಾಗಿದೆ. ಇದರಲ್ಲಿ ಶೇಕಡ.87 ಅನುದಾನವು ಬೋಧಕ ಹಾಗು ಬೋಧಕೇತರ ಸಿಬ್ಬಂದಿ ವೇತನಕ್ಕೆ ವೆಚ್ಚವಾಗುತ್ತದೆ ಎಂದು ತಿಳಿಸಿದರು. ಜ್ಞಾನ, ತಂತ್ರಜ್ಞಾನ ಮತ್ತು ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಆಧ್ಯತೆ ನೀಡಿದಷ್ಟು ಆರ್ಥಿಕ ವ್ಯವಸ್ಥೆ ಅಭಿವೃದ್ಧಿಯಾಗಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ವಿಶ್ವವಿದ್ಯಾಲಯಗಳಿಗೆ ಪದವಿ ಕಾಲೇಜುಗಳನ್ನು ಪ್ರಾರಂಭಿಸುವುದಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಡಿಸಿಎಂ ಹೇಳಿದರು.
No comments:
Post a Comment